ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯ ದಾಳದಾಟಕ್ಕೆ ಉಪಕರಣಗಳಾದ ಶೋಷಿತ ಗ್ರಾಮ ಗುಡಿಸಲ ಕಡು ಬಡವರು ಮತ್ತು ಧೀಮಂತ ಸ್ತ್ರೀಯರೇ ಮಾನವೀಯ ಅಂತಃಕರಣವನ್ನು ಪೋಷಿಸುವ ಜೀವಶಕ್ತಿಗಳಾಗಿ ಇಲ್ಲಿನ ಕತೆಗಳಲ್ಲಿ ಜೀವಿಸಿವೆ. ಕತೆಗಳಲ್ಲಿ ನಿರೂಪಿತ ನಿತ್ಯ ಜೀವನದ ಪರಿಚಿತ ಸಾಮಾನ್ಯ ವ್ಯಕ್ತಿಗಳು ರಾಜಶೇಖರರ ಕಥನದ ಸಂದರ್ಭದಲ್ಲಿ ಅನನ್ಯ ಸಾಂಸ್ಕೃತಿಕ ಪ್ರತಿನಿಧಿಗಳಾಗಿ ಮರುಭೇಟಿಯಾಗುತ್ತಾರೆ. ಗೊತ್ತಿರುವವರೇ ಹೊಸ ಅರಿವಿನ ಗುರುತಿನಲ್ಲಿ ನಿಜವಾಗುತ್ತಾರೆ. ಇದು ಕತೆಯ ಪ್ರತ್ಯಭಿಜ್ಞಾನದ ನಾಟಕೀಯ ಗುಣ.

ಮನುಷ್ಯ ಮಣ್ಣಿನಲ್ಲಿಟ್ಟ ಅದಮ್ಯ ನಂಬಿಕೆ ಮತ್ತು ಪ್ರೀತಿ ರಾಜಕೀಯ ಭಾಷೆಯ ಭ್ರಷ್ಟ ಸ್ವರೂಪವನ್ನು ಪ್ರತಿರೋಧಿಸುವ ಧ್ವನಿಯಾಗಿ ಇಲ್ಲಿ ಅಂತಃಸ್ಥವಾಗಿದೆ. ಅಭಿವೃದ್ಧಿಯ ವೇಷ ತೊಟ್ಟ ಆಧುನಿಕ ಭೋಗ ವಿಕಾರಗಳಿಂದ ವಿಷವಾದ ಜೀವ ಪರಿಸರ, ಬದುಕಿನ ಅಸ್ತಿತ್ವಕ್ಕೆ ಮಾರಕ ಸವಾಲಾದ ಪ್ರಕೃತಿ, ಅಮಾಯಕರನ್ನು ಅಧಿಕಾರ ಸಾಧನೆಯ ಸಾಧನಗಳನ್ನಾಗಿಸಿದ ಅಮಾನುಷತೆ, ಮತೀಯ ಸೌಹಾರ್ದತೆಯನ್ನು ದ್ವೇಷಿಸುವ ಸಾಂಪ್ರದಾಯಿಕ ಕೇಡುಗಳು, ಮುಗ್ಧರನ್ನು ಭಯೋತ್ಪಾದಕ ಪ್ರತಿರೂಪಿಗಳನ್ನಾಗಿ ಬಿಂಬಿಸುವ ಭಯಗ್ರಸ್ತ ಏಕರೂಪಿ ಜಗತ್ತು ಸುಲಭವಾಗಿ ಕರಗುವ ಭಾವುಕತೆಯಾಗದೆ ಕ್ಷಣಿಕ ಉದ್ರೇಕದ ವೈಚಾರಿಕತೆಯಾಗದೆ ಚಿತ್ರಿತವಾಗಿದೆ.

ಭೌತಿಕ ವಾಸ್ತವದ ವಿವರಗಳಿಂದ ಆಯ್ದ ಪ್ರತಿಮೆಗಳು ಪಾತ್ರಗಳ ಮನೋವಾಸ್ತವದ ಪ್ರತೀಕಗಳಾಗುವುದು ತಾಂತ್ರಿಕ ಅಲಂಕಾರಕ್ಕೆ ಸೀಮಿತಗೊಳ್ಳದೆ ಅವು ಸ್ಥಳೀಯ ಸತ್ವವನ್ನು ಕತೆಯ ಭಾಷೆಯನ್ನಾಗಿ ಪರಿವರ್ತಿಸುವುದರಲ್ಲಿ ಪಡೆದ ಯಶಸ್ಸು ರಾಜಶೇಖರರ ಕಲಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ.

                                                                                                                                                                                                              ಶ್ರೀಧರ ಬಳಗಾರ

ಹಳೆಮನೆ ರಾಜಶೇಖರ

16 other products in the same category:

Product added to compare.