ದೀಪಾರವರ ಕತೆಗಳು ಎರಡು ಮುಖ್ಯ ಕಾರಣಗಳಿಗಾಗಿ ಗಮನ ಸೆಳೆಯುತ್ತವೆ. ವಲಸೆ, ಸ್ಥಳಾಂತರ, ನಿರಾಶ್ರಿತರ ಅತಂತ್ರ ಸ್ಥಿತಿ, ದಿವಾಳಿತನ, ಆಸರೆಯ ನೆಲೆಯನ್ನು ಕಳೆದುಕೊಂಡವರನ್ನೊಳಗೊಂಡ ಚರಿತ್ರೆಯ ಒತ್ತಡಗಳಿಂದ ರೂಪುಗೊಳ್ಳುತ್ತಿರುವ ಸಾಮಾಜಿಕ ರೂಪಾಂತರ ಪ್ರಕ್ರಿಯೆ ಒಂದಾದರೆ, ರೂಪಾಂತರ  ಪ್ರಕ್ರಿಯೆಯ ಒಡಲೊಳಗೆ ದೈನಿಕ ದುಡಿಮೆಯ ದೈವಿಕ ನೂಲುಗಳಿಂದ ಬದುಕನ್ನು ನೇಯುತ್ತಿರುವವರ ಕನಸು ವಾಸ್ತವದಲ್ಲಿ ನಿಜವಾಗದಿದ್ದರೂ ಒಳ್ಳೆಯತನವನ್ನು ಬಿಡದಿರದ ಸತ್ಯ ಇನ್ನೊಂದು. ಮನುಷ್ಯ ಸಹಜ ಆಸೆ, ಅಸೂಯೆ, ಸಣ್ಣತನ, ಅಸಹನೆ ಮತ್ತು ಸ್ವಾಭಿಮಾನದ ಹಟದ ದುರ್ಬಲ ಕ್ಷಣದ ತಲ್ಲಣಗಳ ತುದಿಯಲ್ಲಿ ಪಾತ್ರಗಳು ಅಸ್ತಿತ್ವಕ್ಕೆ ಹೋರಾಡುವವರ ಮನುಷ್ಯತ್ವದ ಮಾಂತ್ರಿಕ ಸ್ಪರ್ಶಕ್ಕೆ ತೆರೆದುಕೊಂಡು ಬಿಡುಗಡೆಗೊಳ್ಳುವ ಅಪೂರ್ವ ಮುಖಾಮುಖಿ ಜರುಗುವುದು ಕಥನದ ವಿಶೇಷವಾಗಿದೆ.

ಕೂಳಿಗಾಗಿ ಸಮುದ್ರದ ಬಿಸಿಲು ಗಾಳಿಗೆ ಬೆವರಿ ಬೇಯುತ್ತಲೇ ಇರುವ, ಎಲ್ಲೆಲ್ಲೂ ಕನ್ನಡ ಶಾಲೆಯ ಅಕ್ಕೋರ ನೆರಳುಗಳೇ ಅಲೆದಾಡುವ, ಒಲೆಯ ಮಡಕೆ ಗಂಜಿ ಕಂಪಿನ, ಮಣ್ಣು ಒಳ ಸಾರಿಸಿದ ಸಗಣಿ ವಾಸನೆಯ, ಮೀನು ಪಳದಿ ಪರಿಮಳದ, ಕೋಳಿ ಪಿಟ್ಟಿಯ, ನೆನಪುಕ್ಕಿಸುವ ಸೊಕ್ಕಿನ ಮಳೆಯ, ಅಂಗಡಿಯ ಕಂದೀಲು ಚೆಲ್ಲಿದ ಮೌನ ಮುಸ್ಸಂಜೆಯ ಕರಾವಳಿಯ ವಿವರಗಳಿಂದ ಕಥೆಗಾರ್ತಿ ಕಟ್ಟಿದ ಪರಿಸರ ಜೀವಂತವಾಗಿದೆ. 

ಉತ್ತರ ಕನ್ನಡದ ವಿಶಿಷ್ಟ ಉಪಸಮುದಾಯದವರ ಮಾತಿನ ಛಂದಸ್ಸು, ನುಡಿಗಟ್ಟು, ಸ್ವರ ಒತ್ತಿನಲ್ಲಿ ಜಿನುಗುವ ಕಥಾಂಶಗಳನ್ನು ಮನುಷ್ಯರಾಗಿ ಉಳಿಯಲು ಅಗತ್ಯವಿರುವ ಸಂಜೀವಿನಿಯಂತೆ ಬಳಸಿಕೊಳ್ಳುವುದರಲ್ಲಿ ದೀಪಾ ಯಶಸ್ವಿಯಾಗಿದ್ದಾರೆ.

ವರ್ತಮಾನದಲ್ಲಿ ನೆಮ್ಮದಿಯ ತಾಣವನ್ನು ಕಳೆದುಕೊಂಡ ದುಃಖಿತ ಮನುಷ್ಯರ ಪುನರ್ವಸತಿಗಳನ್ನಾಗಿ ಇಲ್ಲಿನ ಕತೆಗಳನ್ನು ಓದುವಂತೆ ಒತ್ತಾಯಿಸುವ ಪರೋಕ್ಷ ಸೂಚನೆ ದೀಪಾರವರ ಪ್ರಯೋಗ ಶೀಲತೆಯ ಬಗ್ಗೆ ಕುತೂಹಲವನ್ನುಂಟುಮಾಡಿದೆ.

                                                                                                                                                                              - ಶ್ರೀಧರ ಬಳಗಾರ

ದೀಪಾ ಹಿರೇಗುತ್ತಿ

16 other products in the same category:

Product added to compare.