ನೀರಿಗೆ ನಿರ್ಮಲ ಅನ್ನುವ ಅರ್ಥವೂ ಇದೆ. ಎಲ್ಲವನ್ನೂ ಶುದ್ಧ ಮಾಡುವುದು ನೀರು. 'ಶುದ್ಧ ಮಾಡುವಿಕೆ' ಈ ಕಾದಂಬರಿಯ ಮೂಲದ್ರವ್ಯ ಕೂಡ. ಹಾಗಾದರೆ ಶುಚಿಯಾಗಿರಬೇಕಾಗಿರುವುದೇನು? ಮನೆಯೋ, ಮಂದಿರವೋ  ಅಥವಾ ಮನವೊ?ಎಂಬ ಬಹುಕಾಲದ ಪ್ರಶ್ನೆಯಿಲ್ಲಿ ಪುನರುದ್ಭವಿಸಿದೆ. ಹೀಗೆ, ಸಾರ್ವಕಾಲಿಕವೆನಿಸುವ ಸಂಗತಿಯೊಂದನ್ನು ತಮ್ಮದೇ ಅನುಭವದ ಜರಡಿಯಲ್ಲಿ ಸಾಣಿಸಿ ನೋಡುವ ಮೊಗಸಾಲೆಯವರ ವಿಶಿಷ್ಟ ಕಥನ ಶೈಲಿಗೆ "ನೀರು" ಸಾಕ್ಷಿಯಂತಿದೆ.

ನದಿಯೊಂದರ ನೀರ ಹರಿವಿನೊಂದಿಗೇ ಸಾಗುವ ಅಸಂಖ್ಯ ಜೀವ ಜಂತುಗಳು, ಕಸ ಕಡ್ಡಿ ಕಲ್ಮಷಗಳು, ಮಾನವ ನಿರ್ಮಿತ ಹಡಗು ಹಾಯಿಗಳಂತೆ; ಮನುಷ್ಯ ಸಂಬಂಧಗಳ ನಡುವಿನ ಸಂಘರ್ಷ,ಸೋಲು ಗೆಲುವಿನ ಮೇಲಿಳಿತ, ಜಾತಿ ಜತನದರಾಜಕೀಯ ಈ ಕಾದಂಬರಿಯುದ್ದಕ್ಕೂ ಹರಿದಿದೆ.ಅಣ್ಣ ತಮ್ಮಂದಿರ ನಡುವೆ ಹಂಚಿ ಹೋದ ಭೂಮಿ ಹಾಗೂ ಅದರೊಂದಿಗೇ ಪಾಲಾದ ನೀರಿನ ಒಡೆತನ ಹೇಗೆ ಮನಸ್ಸುಗಳನ್ನು ಒಡೆಯುವುದರಲ್ಲಿ ಸಫಲವಾಗುತ್ತದೆ,ಹೆಣ್ಮನವನ್ನು ನಲುಗಿಸುತ್ತದೆ; ಅಲ್ಲೇ ಹುಟ್ಟಿದ ದ್ವೇಷ ಅಸೂಯೆಯ ಸೆಲೆ ಅದು ಹೇಗೆ ಮನುಷ್ಯನ ವೃತ್ತಿ ಪ್ರವೃತ್ತಿಗೂ ಆವರಿಸಿಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಹಂತ ಹಂತವಾಗಿ ಕಾಣಿಸುತ್ತಾ ಹೋಗುತ್ತದೆ. ಸಣ್ಣ ಊರೊಂದರ ಜನಜೀವನ, ಸಾಂಸ್ಕೃತಿಕ ಆಚರಣೆ ಇತ್ಯಾದಿಗಳ ದಟ್ಟ ವಿವರಗಳ ಜೊತೆಗೇ ಕಾಲಾಂತರದಲ್ಲಿ ಅವುಗಳಲ್ಲಾಗುವ ಪಲ್ಲಟವನ್ನೂ ಮನೋಜ್ಞವಾಗಿ ಈ ಕೃತಿ ಹಿಡಿದುಕೊಡುತ್ತದೆ.

ಪಾತ್ರಗಳ ಮನೋಖನನ ಹಾಗೂ ಯಾರು ಸರಿ,ಯಾರು ತಪ್ಪೆಂಬ ಮಾಪನದ ನಿರಾಕರಣೆಗಳೆರಡೂ ಇಲ್ಲಿ ಏಕಕಾಲಕ್ಕೆ ಸಂಭವಿಸುತ್ತದೆ. ಆ ಮುಖೇನ, ಪ್ರತಿ ಪಾತ್ರವೂ ವ್ಯವಸ್ಥೆ ಹಾಗೂ ಕಾಲದ ಬಲಿಪಶುಗಳು ಎಂಬ ಸಂದೇಶವೂ ಪ್ರತಿಫಲಿಸುತ್ತದೆ.

                                                                                                                                                                                                  - ಕರ್ಕಿ ಕೃಷ್ಣಮೂರ್ತಿ 

ನಾ ಮೊಗಸಾಲೆ

16 other products in the same category:

Product added to compare.