ಶ್ರೀಧರ ಬಳಗಾರರ ವಿಸರ್ಗ ಕಾದಂಬರಿ ಕುರಿತು ಪ್ರಸಿದ್ಧ ವಿಮರ್ಶಕ ರಾಜೇಂದ್ರಚೆನ್ನಿಯವರು ಹೇಳಿರುವ ಕೆಲವು ಮಾತುಗಳು ಹೀಗಿವೆ :

ಶ್ರೀಧರ ಬಳಗಾರ ಅವರ 'ವಿಸರ್ಗ' ಇತ್ತೀಚೆಗೆ ನಾನು ಓದಿದ ಪ್ರಭಾವಿ ಕಾದಂಬರಿಗಳಲ್ಲಿ ಒಂದು. ಓದಿದ ಮೇಲೆ ಬಹುಕಾಲ ತನ್ನ ವಸ್ತುವಿನ ಗಾಂಭೀರ್ಯ ಮತ್ತು ಹರಹು, ಆ ವಸ್ತುವಿನ ನಿರ್ವಹಣೆಯಲ್ಲಿ ಕಂಡುಬರುವ ಆಳ, ತೀವ್ರತೆ ಹಾಗೂ ವಸ್ತುನಿಷ್ಠತೆಯಿಂದಾಗಿ  ಮನಸ್ಸಿನಲ್ಲಿ ನೆಲೆ ಮಾಡುವ ಕೃತಿ ಇದಾಗಿದೆ. ಆಧುನಿಕ ಕನ್ನಡ ಕಥನದ ಬಹುಮುಖ್ಯ ಭಾಗವಾಗಿರುವ ಉತ್ತರ ಕನ್ನಡದ ಗ್ರಾಮೀಣ ಸಮಾಜದಲ್ಲಿ ಕತೆಯ ಘಟನೆಗಳು ನಡೆಯುತ್ತವೆ. ಸ್ಥಳೀಯವೂ ಸ್ಥಿರವೂ ಆಗಿ ಕಾಣುವ ಈ ಸಮಾಜದ ಸಾಮಾನ್ಯ ವ್ಯಕ್ತಿಗಳ ಬದುಕಿನ ಕತೆಯಿದಾಗಿದೆ. ಸಾಮಾನ್ಯತೆಯೊಳಗೆ ದೈನಂದಿಕತೆಯ ಒಳಗೆ ಅಸಾಮಾನ್ಯವಾದ ಅನುಭವ ಲೋಕಗಳು ಬಿಚ್ಚಿಕೊಳ್ಳುವುದು ಈ ಕಾದಂಬರಿಯ ವಿಶೇಷವಾಗಿದೆ. ಈ ಅನಾವರಣದ ಕಥನಕ್ಕೆ ಬಳಗಾರರು ಬಳಸುವ ಭಾಷೆ, ಶೈಲಿಗಳು ಸಾಂದ್ರವಾದ ವಾಸ್ತವಿಕ ವಿವರಗಳನ್ನು ಕಾವ್ಯಕ್ಕೆ ಹತ್ತಿರವಾದ ರೀತಿಯಲ್ಲಿ ಕಟ್ಟಿಕೊಡುತ್ತವೆ. ಮನುಷ್ಯ ಜೀವಿಗಳು ಸ್ವತಂತ್ರರೆ? ಪೂರ್ವಲಿಖಿತ ದೈವದಂತೆ ನಮ್ಮ ಪರಿಸರ, ಕುಟುಂಬದ ನೆನಪುಗಳು, ಚರಿತ್ರೆ ಉಸಿರುಕಟ್ಟಿಸುವ ಸಮಾಜ ಇವೆಲ್ಲವು ನಮ್ಮ ಪ್ರಜ್ಞೆಯನ್ನೇ ನಿಯಂತ್ರಿಸುತ್ತವೆಯೆ? ಹಾಗಿದ್ದರೆ ನಮ್ಮ ಕ್ರಿಯಾ ಸ್ವಾತಂತ್ರ್ಯದ ಅರ್ಥವೇನು? ಅಲ್ಲದೆ ಈ ಪರಿಸರವು ಅಂದುಕೊಂಡಷ್ಟು ಪಾರದರ್ಶಕವಲ್ಲ. ಹೆಜ್ಜೆ ಇಟ್ಟಲ್ಲಿ ಸೆಳೆದುಕೊಳ್ಳುವಂಥ ಒಳಸುಳಿಗಳಿವೆ. ಕೊನೆಗೂ ಅರ್ಥವಾಗದ ಸಂದಿಗ್ಧಗಳಿವೆ. ಹೀಗೆ ಕ್ರಮೇಣವಾಗಿ ಈ ಪುಟ್ಟ ಜಗತ್ತು ಮನುಷ್ಯ ಅಸ್ತಿತ್ವದ microcosm ಆಗಿ ಓದುಗನ ಮನಸ್ಸಿನಲ್ಲಿ ವಿಸ್ತರಿಸಿಕೊಳ್ಳುತ್ತದೆ.  

ಗಾಢವಾದ ಅನುಭವವೊಂದನ್ನು ಕೊಡುವ ಈ ಕೃತಿ ಮಹತ್ವದ್ದಾಗಿದೆ. ಬದುಕಿನ ಅಚಿಂತ್ಯ ಸ್ವಭಾವವನ್ನು ಸಂಯಮದಿಂದ ಅಳೆದು ತೂಗಿ ಬರೆದಿರುವ ಶ್ರೀಧರ ಬಳಗಾರರು ನಮ್ಮ ಕೃತಜ್ಞತೆಗೆ ಅರ್ಹರಾಗಿದ್ದಾರೆ. ಲಯಗಾರಿಕೆ ಹಾಗೂ ಪ್ರತಿಮೆಗಳಿಂದ ನಿಬಿಡವಾದ ಕೃತಿಯ ಭಾಷೆ, ಒಂದು ಮಹತ್ವದ ಸಾಧನೆಯಾಗಿದೆ. ನಿಧಾನಗತಿಯ ಜೀವನ ಕ್ರಮವೊಂದರ ಕಥನವಾಗಿರುವುದರಿಂದ ಅದು ನಿಧಾನದ ಓದನ್ನು ಬಯಸುತ್ತದೆ. ಅಂಥ ಓದು ದಟ್ಟವಾದ ಅನುಭವವನ್ನು ತರುತ್ತದೆ.  

ಶ್ರೀಧರ ಬಳಗಾರ

16 other products in the same category:

Product added to compare.