ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕರ ಒಂದು ಆಶ್ರಯಧಾಮದೊಳಗೆ ಈ ನಾಟಕ ಸಂಭವಿಸುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರಿದೇ ಬದುಕಿನ ಸಂಧ್ಯಾಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಶಯರಲ್ಲ;  ಹಲವು ಬಗೆಯಲ್ಲಿ ಕ್ರಿಯಾಶೀಲರು.ಪತ್ನಿಯಿಂದಲೇ ಹೀಗಳೆಯಲ್ಪಟ್ಟು, ಮಕ್ಕಳಿಂದಲೂ ಬೇರ್ಪಟ್ಟರೂ ಅವರೆಲ್ಲರಿಗೂ ಹಣ ಕಳಿಸುತ್ತಿರುವ ದಿಲ್ಖುಷ್ ಮನುಷ್ಯ ದೇಸಾಯಿ ಇಲ್ಲಿದ್ದಾನೆ; ಹಾಗೇ, ಮಗನ ವಿದ್ಯಾಭ್ಯಾಸಕ್ಕಾಗಿ  ಕಷ್ಟಪಟ್ಟು ಹಣ ಸಂಪಾದಿಸಿ ತಮ್ಮ ಆಸೆಗಳನ್ನು ಅದುಮಿಟ್ಟು ಬದುಕಿದ ನಾನಾ-ಮಾಯಿ ಎಂಬ ಗಂಡಹೆಂಡಿರು ಇಲ್ಲೀಗ ತಮ್ಮ ಹೊಸ ಬದುಕನ್ನು ಆವಿಷ್ಕರಿಸುತ್ತಿದ್ದಾರೆ;ಅಂತೆಯೇ, ಬದುಕಿನುದ್ದಕ್ಕೂ ಸಮಾಜಮುಖಿ ಚಳುವಳಿಗಾರನಾಗಿ ದುಡಿದ ಭಾಯೀಜಿ, ಅವನಿಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟ ಅವನ ಪತ್ನಿ ಸೇವಾತಾಯಿ ಇಲ್ಲೀಗ  ಹಳೆಯ ನೆನಪುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾರೆ. ಹಳೆಯ ರಂಗಭೂಮಿ ಕಲಾವಿದ ಜನುಭಾಯಿ ಇಲ್ಲೀಗ ತನ್ನ ಬಣ್ಣದ ಬದುಕಿನ ರೋಮಾಂಚನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಇಂಥವರೆಲ್ಲರ ನಡುವೆ, ಹರ್ಷನೆಂಬ ಹೊಸಗಾಲದ ಯುವ ರಂಗಕರ್ಮಿಯೊಬ್ಬ ಈ ವಾರ್ಧಕ್ಯದ ತಥ್ಯ ತಿಳಿಯಲಿಕ್ಕೆಂದು, ತನ್ನ ತಂದೆಯ ವೇಷಾಂತರದಲ್ಲಿ ಈ ವೃದ್ಧಾಶ್ರಮಕ್ಕೆ ಸೇರಿಕೊಂಡು ಅವರೊಂದಿಗೆ ರಂಗಭೂಮಿಯ ಪಾಠಗಳನ್ನು ಕಲಿಯತೊಡಗುತ್ತಾನೆ. ಹೀಗೆ ವೃದ್ಧಾಪ್ಯವೆಂಬ  ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಮುನ್ನಡೆಯುತ್ತದೆ.

                                                           

                                                                                                                                                                                             ಕೆ.ವಿ.ಅಕ್ಷರ 

ಜಯಂತ ಕಾಯ್ಕಿಣಿ

16 other products in the same category:

Product added to compare.