"ಆಡಳಿತ ಕ್ಷೇತ್ರದಲ್ಲಿ ಸುಮಾರು 37 ವರುಷಗಳ ನಿಸ್ಪೃಹ ಸೇವೆ ಸಲ್ಲಿಸಿದ ಅನುಭವಿ ಅಧಿಕಾರಿಯೊಬ್ಬರು ತಮ್ಮ ಅಧಿಕಾರಾವಧಿಯ ನೆನಪುಗಳನ್ನು `ಜೈತ್ರಯಾತ್ರೆ'ಯಾಗಿ ದಾಖಲಿಸಿರುವ ಅಪೂರ್ವ ಸಾಹಸ ನಡೆಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇದೊಂದು ಆಡಳಿತಾನುಭವದ ಮೈಲಿಗಲ್ಲು. ಏಕೋ, ಏನೋ ತಿಳಿಯದು ಸ್ವಭಾವತಃ ಐ.ಎ.ಎಸ್. ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ತೆರೆದಿಡುವುದು ಅಪರೂಪ. ಅಧಿಕಾರದ ಹಂತ ಏರಿದಂತೆಲ್ಲ ಸಂಕೋಚ ಮತ್ತು ಹಿಂಜರಿಕೆಗೆ ಒಳಗಾಗುವುದು ಅಧಿಕಾರಿಗಳ ಲಕ್ಷಣ. ಆದರೆ ಅಚ್ಚಕನ್ನಡಿಗ ಕೆ. ಜೈರಾಜ್ ಹೀಗಲ್ಲ. ಇವರು ಧೈರ್ಯಶಾಲಿ, ಗಟ್ಟಿಗ, ಸಂವೇದನಾ ಜೀವಿ. ಸ್ವಾತಂತ್ರ್ಯಾನಂತರದ ಭಾರತೀಯ ಆಡಳಿತ ಸೇವಾ ಕ್ಷೇತ್ರದಲ್ಲಿ ತಾವು ಕಂಡ, ಅನುಭವಿಸಿದ ಹಾಗೂ ನಾಡಿನ ಜನತೆಗೆ ನೆರವಾದ ನೂರೆಂಟು ಘಟನೆಗಳನ್ನು ಕೆ. ಜೈರಾಜ್ ಅವರು ಬರೆದಿಟ್ಟ ಮೊದಲಿಗರಾಗಿದ್ದಾರೆ. ಈ ಗ್ರಂಥ `ಜೈತ್ರಯಾತ್ರೆ'ಯು ಇಂದಿನ ಅಧಿಕಾರಿ ಬಳಗಕ್ಕೆ ಮಾರ್ಗಸೂಚಿಯಾಗುವಂತೆಯೇ ಮುಂದೆ ಬರುವ ನಾಳಿನ ಪೀಳಿಗೆಯ ಅಧಿಕಾರಿಗಳಿಗೆ ಮೇಲ್ಪಂಕ್ತಿಯ ಸಂಹಿತೆಯಾಗುವುದರಲ್ಲಿ ಸಂದೇಹವಿಲ್ಲ."-ಎಸ್.ಕೆ. ಶೇಷಚಂದ್ರಿಕ