ಬಂಗಾಳದ ಚತುರೆಯೊಬ್ಬಳು ಮೈಸೂರಿನ ಅರಮನೆಯ ಆಶ್ರಯ ಪಡೆದ ಪರಿಣಾಮದಿಂದಾಗಿಯೇ ನಮ್ಮ ರಾಷ್ಟ್ರಗೀತೆ ಆ ರಾಗರೂಪ ಪಡೆದದ್ದು! ತಿರುವಾಂಕೂರಿನ ಆಡಳಿತ ನೆಲೆ ನೀಡದ ದಲಿತವೈದ್ಯನಿಗೆ ಮೈಸೂರು ಆಶ್ರಯ ಕೊಟ್ಟ ಪರಿಣಾಮವೇ ಸ್ವಾಮಿ ವಿವೇಕಾನಂದರು ಸಿಡುಬುರೋಗದಿಂದ ಬಿಡುಗಡೆ ಪಡೆದು ಚಿಕಾಗೋಗೆ ಹೋಗಲು ಸಾಧ್ಯವಾದದ್ದು! ಕೋಲಾರದ ಚಿನ್ನದಗಣಿಗೆ ವಿದ್ಯುತ್ ಸರಬರಾಜು ಮಾಡಿ ಮುಂದೆ ಬೆಂಗಳೂರು ಸೇರಿದಂತೆ ನಮ್ಮ ನೆಲವನ್ನು ಬೆಳಗಿಸಿದ್ದು ಮೈಸೂರಿನ ರಾಣಿಯ ಪ್ರೋತ್ಸಾಹದಲ್ಲಿ ಸ್ಥಾಪಿತಗೊಂಡ ಕಾವೇರಿ ವಿದ್ಯುತ್ ಸ್ಥಾವರ! ಆ ರಾಣಿಯ ಮುಂದಾಲೋಚನೆಯಿಂದಾಗಿಯೇ ಸಿಡುಬು, ಪ್ಲೇಗ್ ಮುಂತಾದುವಕ್ಕೆ ಅತ್ಯುನ್ನತ ಲಸಿಕೆಗಳು ಮೈಸೂರುಪ್ರಾಂತ್ಯದಲ್ಲಿ ತಯಾರಾದದ್ದು.ಮಾರಿಕಣಿವೆಯಲ್ಲಿ ಕೃಷಿನೀರಾವರಿ ಅಣೆಕಟ್ಟು ನಿರ್ಮಾಣಗೊಂಡದ್ದು. ಬೆಂಗಳೂರಿನಲ್ಲಿ ಮಲ್ಲೇಶ್ವರಂ,ಬಸವನಗುಡಿಗಳು ಪ್ರಾರಂಭವಾದದ್ದು: ಟಾಟಾ ಅವರ ಆಶಯದ ವಿಜ್ಞಾನ ಸಂಸ್ಥೆ ನೆಲೆಗೊಂಡದ್ದು...ಇಂತಹ ಅದೆಷ್ಟೋ ಅಪರೂಪದ ಅಮೂಲ್ಯವಾದ ಕೈಂಕರ್ಯಗಳನ್ನು ಕೊಡುಗೆಯಾಗಿಸಿದ, ಜನಮನದಲ್ಲಿ ಹೊಸಚಿಂತನೆಗಳ ಬೀಜ ಬಿತ್ತಿದ, ಮೈಸೂರು ಪ್ರಾಂತ್ಯದ ಬೆಳವಣಿಗೆಯ ರೂವಾರಿಯಾಗಿದ್ದ ಅಪರೂಪದ ರಾಣಿ ಕೆಂಪನಂಜಮ್ಮಣ್ಣಿಯವರ ಹೃದಯಸ್ಪರ್ಶಿ ಜೀವನಗಾಥೆ ಈ ಕೃತಿ.

      ಕಾಲಗರ್ಭದಲ್ಲಿ ಅಡಗಿರಬಹುದಾದ ಕೋಹಿನೂರುಗಳನ್ನು ಹುಡುಕಿ ಹೊರತೆಗೆಯಬಲ್ಲ ಶೋಧನಾ ಕುಶಲತೆ ಮತ್ತು ಆ ಅಮೂಲ್ಯ ವಜ್ರಗಳ ಪರಿಚಯವನ್ನು ಓದುಗರ ಕಣ್ಣು ಕೋರೈಸುವಂತೆ ಚಿತ್ರಿಸುವ ಸಾವಧಾನದ ಬರಹಶೈಲಿ ಗಜಾನನ ಶರ್ಮ ಅವರಿಗೆ ದಕ್ಕಿರುವುದು ಕನ್ನಡಿಗರ ಅದೃಷ್ಟ. ಅವರ 'ಚೆನ್ನಭೈರಾದೇವಿ' ಮತ್ತು 'ಪ್ರಮೇಯ' ಕೃತಿಗಳೇ ಇದಕ್ಕೆ ಸಾಕ್ಷಿ.ಐದು ಶತಮಾನಗಳಿಂದಲೂ ಅಜ್ಞಾತವಾಗಿಯೇ ಉಳಿದುಹೋಗಿದ್ದ, ಪಶ್ಚಿಮ ಕರಾವಳಿಯ ವೀರಮಹಿಳೆ 'ಮೆಣಸಿನ ರಾಣಿ' ಚೆನ್ನಭೈರಾದೇವಿಯನ್ನು ಮತ್ತು ಹಿಂದೂ ಮಹಾಸಾಗರದಿಂದ ಹಿಮಾಲಯದ ತುದಿಯವರೆಗೆ ಭಾರತದ ಅಂಗುಲ ಅಂಗುಲವನ್ನೂ ಅಳೆದು ವಿಸ್ತೃತವಾದ ನಕ್ಷೆ ತಯಾರಿಸುವಲ್ಲಿ ತಮ್ಮ ಜೀವನವನ್ನೇ ತೇಯ್ದ ಪ್ರಮೇಯಕರನ್ನು ಕನ್ನಡದ ಓದುಗರ ಮುಂದೆ ಅವರು ತೆರೆದಿಟ್ಟ ರೀತಿಯೇ ಅನನ್ಯ.ಈ ಹಾದಿಯಲ್ಲಿ ಅವರು ಹೊರತೆಗೆದ  ಮತ್ತೊಂದು ಅಮೂಲ್ಯ ನಿಧಿ ಕೆಂಪನಂಜಮ್ಮಣ್ಣಿಯವರ ಬಗೆಗಿನ ಈ ಕೃತಿ. 

                                                                                                                                                                                        ಡಾ| ಕೆ.ಎನ್. ಗಣೇಶಯ್ಯ  

ಡಾ| ಗಜಾನನ ಶರ್ಮಾ

16 other products in the same category:

Product added to compare.